ಕೋಗಿಲು ಲೇಔಟ್ ಒತ್ತುವರಿದಾರರಿಗೆ ರಂಜಾನ್, ಯುಗಾದಿ ಗಿಫ್ಟ್; 'ಮನೆ ಹಂಚಿಕೆ ಹಕ್ಕುಪತ್ರ' ಕೊಟ್ಟ ಸರ್ಕಾರ!
ಬೆಂಗಳೂರು (ಮಾ.18):ಬೆಂಗಳೂರಿನ ವಿವಾದಿತ ಕೋಗಿಲು ಬಡಾವಣೆಯ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡಿದ್ದ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊನೆಗೂ ಸಿಹಿ ಸುದ್ದಿ ನೀಡಿದೆ. ಮಾನವೀಯ ನೆಲೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಭರವಸೆಯಂತೆ, ಇಂದು ವಿಕಾಸಸೌಧದಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ 30 ಕುಟುಂಬಗಳಿಗೆ ಫ್ಲ್ಯಾಟ್ಗಳ ಹಕ್ಕುಪತ್ರವನ್ನು ವಿತರಿಸಲಾಯಿತು. ಸಚಿವರ ಉಪಸ್ಥಿತಿಯಲ್ಲಿ ಹಕ್ಕುಪತ್ರ ವಿತರಣೆ:
ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಜಂಟಿಯಾಗಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು. ಇಂದು ಹಕ್ಕುಪತ್ರ ಪಡೆದ ಒಟ್ಟು 30 ಜನರಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ವರ್ಗೀಕರಣ ಮಾಡಲಾಗಿದೆ.
ಈ ಪೈಕಿ ಸಾಮಾನ್ಯ ವರ್ಗದ 10, ಪರಿಶಿಷ್ಟ ಜಾತಿಯ 07, ಪರಿಶಿಷ್ಟ ಪಂಗಡದ 02 ಹಾಗೂ 10 ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳಿಗೆ ಸೂರು ಕಲ್ಪಿಸಲಾಗಿದೆ. ಇದನ್ನು ಸಂತ್ರಸ್ತರು 'ಯುಗಾಗಿ' ಮತ್ತು 'ರಂಜಾನ್ ಗಿಫ್ಟ್' ಎಂದೇ ಸಂಭ್ರಮಿಸುತ್ತಿದ್ದಾರೆ.
ಅರ್ಹರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಿತು?
ಕೋಗಿಲು ಬಡಾವಣೆಯ ಒತ್ತುವರಿ ತೆರವು ಪ್ರಕರಣದಲ್ಲಿ ಆರಂಭದಲ್ಲಿ 165 ಸಂತ್ರಸ್ತರನ್ನು ಗುರುತಿಸಲಾಗಿತ್ತು. ಆದರೆ, ಇಲಾಖೆಯು ನಡೆಸಿದ ಕಟ್ಟುನಿಟ್ಟಿನ ದಾಖಲೆ ಪರಿಶೀಲನೆಯ ನಂತರ ಕೇವಲ 61 ಮಂದಿ ಮಾತ್ರ ಪುನರ್ವಸತಿಗೆ ಅರ್ಹರಿದ್ದಾರೆ ಎಂಬುದು ತಿಳಿದುಬಂದಿದೆ. ಈ 61 ಮಂದಿಯಲ್ಲಿ ಮೊದಲ ಹಂತವಾಗಿ ಇಂದು 12 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಇದರೊಂದಿಗೆ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಅರ್ಜಿ ಸಲ್ಲಿಸಿದ್ದ 189 ಜನರಲ್ಲಿ 17 ಮಂದಿ ಅರ್ಹರನ್ನು ಸೇರಿಸಿ, ಇಂದು ಒಟ್ಟು 30 ಜನರಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ.