ಕೊಲಂಬೊ ಪಂದ್ಯದಲ್ಲಿ ಸರಾಂಶ್ ಜೈನ್ ಪಾದಾರ್ಪಣೆ? ಈ ಸ್ಟಾರ್ಗೆ ತಂಡದಲ್ಲಿ ಅವಕಾಶವಿಲ್ಲ!
ಕೊಲಂಬೊ: ಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಎರಡನೇ ಪಂದ್ಯಕ್ಕೆ ಸಿದ್ದತೆ ನಡಸುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮೇಲೆ ಕಣ್ಣಿಟ್ಟಿರುವ ಶುಭಮನ್ ಗಿಲ್ ಪಡೆ ಲಂಕಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಡಬ್ಲ್ಯೂಟಿಸಿ ರೇಸ್ ನಲ್ಲಿ ಜೀವಂತವಾಗಿ ಉಳಿಯುವ ಯೋಜನೆಯಲ್ಲಿದೆ. ಇದೀಗ ಸರಣಿಯ ಎರಡನೇ ಪಂದ್ಯಕ್ಕೆ ಆಡುವ ಬಳಗದಲ್ಲಿ ಬದಲಾವಣೆ ಮಾಡಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ ಎಂದು ವರದಿಯಾಗಿದೆ. ಆಗಸ್ಟ್ 23 ರಂದು ಕೊಲಂಬೊದಲ್ಲಿ ಆರಂಭವಾಗುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಅನುಭವಿ ಆಲ್ರೌಂಡರ್ ಸರಾಂಶ್ ಜೈನ್ ಭಾರತಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ ಎಂದು ವರದಿಯೊಂದು ತಿಳಿಸಿದೆ.
ಮಧ್ಯಪ್ರದೇಶದ ಪರ ದೇಶೀಯ ಕ್ರಿಕೆಟ್ ಆಡುವ 33 ವರ್ಷದ ಸರಾಂಶ್ ಜೈನ್ ದ್ವೀಪ ರಾಷ್ಟ್ರದಲ್ಲಿ ಎರಡು ಪಂದ್ಯಗಳ ಸರಣಿಗೆ ತಮ್ಮ ಮೊದಲ ಟೆಸ್ಟ್ ಕರೆಯನ್ನು ಪಡೆದಿದ್ದಾರೆ. ಗಾಯದಿಂದಾಗಿ ಆಯ್ಕೆಗೆ ಲಭ್ಯವಿಲ್ಲದ ವಾಷಿಂಗ್ಟನ್ ಸುಂದರ್ ಅವರ ಬದಲಿಗೆ ಅವರನ್ನು ತಂಡಕ್ಕೆ ಸೇರಿಸಲಾಯಿತು. ಬಲಗೈ ಆಫ್-ಸ್ಪಿನ್ನರ್ ಮತ್ತು ಸಮರ್ಥ ಎಡಗೈ ಕೆಳ-ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಸರಾಂಶ್ ಜೈನ್, 2014 ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಆದರೆ ರಾಷ್ಟ್ರೀಯ ತಂಡದ ಕರೆಗಾಗಿ ಸುಮಾರು 12 ವರ್ಷಗಳ ಕಾಲ ಕಾಯಬೇಕಾಯಿತು.
ಇಂಡಿಯಾ ಟುಡೇ ವರದಿಯ ಪ್ರಕಾರ, ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ಗೆ ಸರಾಂಶ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ಬಲವಾದ ಅವಕಾಶವಿದೆ. ಸರಾಂಶ್ ಅವರು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಸ್ಪಿನ್ನರ್ಗಳಿಗೆ ಸಾಕಷ್ಟು ನೆರವು ನೀಡಿದ ಗಾಲೆ ಪಿಚ್ನಲ್ಲಿ ಕುಲದೀಪ್ ಪ್ರಭಾವ ಬೀರುವಲ್ಲಿ ವಿಫಲರಾದರು. ಪಂದ್ಯದಲ್ಲಿ ಒಟ್ಟು 25 ಓವರ್ ಬೌಲಿಂಗ್ ಮಾಡಿದ ಕುಲದೀಪ್ 103 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದರು.