Select Location
All Locations
State
Region
City / District
ಬಿಜೆಪಿ ಘಟಕಕ್ಕೆ ಮೇಜರ್ ಸರ್ಜರಿ?: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜೋಶಿ, ಪೂಜಾರಿ ಹೆಸರು

ಬಿಜೆಪಿ ಘಟಕಕ್ಕೆ ಮೇಜರ್ ಸರ್ಜರಿ?: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜೋಶಿ, ಪೂಜಾರಿ ಹೆಸರು

ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಭಾರಿ ಬದಲಾವಣೆಗೆ ಹೈಕಮಾಂಡ್‌ ಮುಂದಾಗಿದೆ ಎಂಬ ವರ್ತಮಾನಗಳು ದೆಹಲಿ ಕಡೆಯಿಂದ ರವಾನೆಯಾಗುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಥವಾ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೆಸರು ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನ ಮುಂಚೂಣಿಗೆ ಬಂದಿದೆ. ವಿಜಯೇಂದ್ರ ಮುಂದುವರಿಕೆ ಅಥವಾ ಬದಲಾವಣೆಯ ಪ್ರಶ್ನೆಯ ಮಧ್ಯೆ ಈ ಎರಡು ಹೆಸರುಗಳು ಬಲವಾಗಿ ಪ್ರಸ್ತಾಪವಾಗುತ್ತಿದೆ. ಇದು ಬಿಜೆಪಿ ರಾಜ್ಯ ಘಟಕದ ಆಯಕಟ್ಟಿನ ಸ್ಥಾನಗಳ ಆಮೂಲಾಗ್ರ ಬದಲಾವಣೆಯ ಮುನ್ಸೂಚನೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇದರ ಜತೆಗೆ ರಾಜ್ಯದಿಂದ ಕೇಂದ್ರ ಸಚಿವ ಸಂಪುಟವನ್ನು ಪ್ರತಿನಿಧಿಸುವ ವ್ಯಕ್ತಿಗಳು ಕೂಡಾ ಬದಲಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯ ಬಿಜೆಪಿಯ ಪರಿಸ್ಥಿತಿಗಳ ಬಗ್ಗೆ ತಲೆಕೆಡಿಸಿಕೊಳ್ಳದ ವರಿಷ್ಠರ ಬಗ್ಗೆ ಕಾರ್ಯಕರ್ತರು ಹಾಗೂ ಮುಖಂಡರು ಅಸಮಾಧಾನಗೊಂಡಿರುವ ಮಾಹಿತಿಯನ್ನು ಸೂಕ್ತ ವ್ಯಕ್ತಿಗಳ ಮೂಲಕ ಹೈಕಮಾಂಡ್‌ಗೆ ತಲುಪಿಸಲಾಗಿದೆ. ಕರ್ನಾಟಕದ ವಿಚಾರದಲ್ಲಿ ವರಿಷ್ಠರು ತಳೆದ ದಿವ್ಯ ನಿರ್ಲಕ್ಷ್ಯವೇ ಈ ಎಲ್ಲ ಗೊಂದಲಗಳ ಮೂಲ. ಅಜೆಂಡಾ ಸೃಷ್ಟಿ ಮಾಡುವ ವರ್ಷದಲ್ಲಿ ನಿರ್ಲಕ್ಷ್ಯದ ಔಚಿತ್ಯ ಏನು ಎಂಬುದಾಗಿ ಕಾರ್ಯಕರ್ತರು ಪ್ರಶ್ನಿಸಲಾರಂಭಿಸಿದ್ದಾರೆ ಎನ್ನಲಾಗಿದೆ. ಜತೆಗೆ ಕರ್ನಾಟಕದ ಸಾಮಾಜಿಕ ವ್ಯವಸ್ಥೆ ಹಾಗೂ ರಾಜಕೀಯ ದೃಷ್ಟಿಕೋನವನ್ನು ಅಳೆಯುವಲ್ಲಿ ವರಿಷ್ಠರು ಪದೇಪದೇ ಎಡವುತ್ತಿದ್ದಾರೆ ಎಂಬ ಕಾರ್ಯಕರ್ತರ ಒಡಲಾಳದ ಮಾತುಗಳನ್ನು ಹೈಕಮಾಂಡ್‌ ಅಂಗಳಕ್ಕೆ ಕಳುಹಿಸಲಾಗಿದೆ. ಇದರ ಭಾಗವಾಗಿಯೇ ಬಿಜೆಪಿಯ ಸಂಘಟನಾ ವ್ಯವಸ್ಥೆಯ ಸುಧಾರಣೆ ಬಗ್ಗೆ ವರಿಷ್ಠರು ಅಭಿಪ್ರಾಯ ಸಂಗ್ರಹಣೆಯನ್ನೂ ಮಾಡಿದ್ದು, ಆ ಆಧಾರದ ಮೇಲೆ ಈಗ ಒಂದಿಷ್ಟು ಶಸ್ತ್ರ ಕ್ರಿಯೆಗಳು ನಡೆಯುವ ಸುಳಿವು ಲಭ್ಯವಾಗಿದೆ.

ಆದರೆ, ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ತೇಲಿಬಿಟ್ಟ ಈ ಎರಡು ಹೆಸರುಗಳು ರಾಜ್ಯದ ಪ್ರಸ್ತುತ ರಾಜಕಾರಣದ ದೃಷ್ಟಿಯಿಂದ ಚರ್ಚೆಗೆ ಕಾರಣವಾಗಿದೆ. ದೆಹಲಿ ಮೂಲಗಳ ಪ್ರಕಾರ ಜಾತಿ ಸಮೀಕರಣಕ್ಕಾಗಿ ಹೈಕಮಾಂಡ್‌ ಈ ಹೆಸರುಗಳ ಬಗ್ಗೆ ಯೋಚಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸಮನ್ವಯವೇ ದೊಡ್ಡ ಸವಾಲಾಗಿ ಪರಿಣಮಿಸಿರುವುದರಿಂದ ಪ್ರಹ್ಲಾದ್‌ ಜೋಶಿ ಅಥವಾ ಕೋಟಾ ಶ್ರೀನಿವಾಸ್ ಪೂಜಾರಿ ಪೈಕಿ ಒಬ್ಬರಿಗೆ ಆದ್ಯತೆ ನೀಡಬೇಕೆಂಬ ಚರ್ಚೆ ದೆಹಲಿ ಮಟ್ಟದಲ್ಲಿ ನಡೆದಿದೆ. ಜೋಶಿ ಹಾಗೂ ಕೋಟಾ ಪ್ರತಿನಿಧಿಸುವ ಜಾತಿ ಸಂಖ್ಯಾಬಲ ದೃಷ್ಟಿಯಿಂದ ಪ್ರಬಲವಾದುದ್ದಲ್ಲ. ಆದರೆ, ಜಾತಿ ಸಮೀಕರಣಕ್ಕಾಗಿಯೇ ಈ ಹಿಂದೆ ಮಾಡಿದ ವಿಜಯೇಂದ್ರ ಹಾಗೂ ಆರ್.ಅಶೋಕ್‌ ಜೋಡಿ ಸಮನ್ವಯದಿಂದ ಸಾಗುವಲ್ಲಿ ಎಡವಿದೆ. ಪಕ್ಷದಲ್ಲಿ ಹಲವು ಬಣಗಳು ಸೃಷ್ಟಿಯಾಗಿದ್ದು, ಅದೆಲ್ಲದಕ್ಕೂ ಜಾತಿ ಲೆಕ್ಕಾಚಾರದ ಮೂಲಕ ಪರಿಹಾರ ಕೊಡುವುದು ಅಸಾಧ್ಯ ಎಂಬ ಭಾವನೆ ವರಿಷ್ಠರಲ್ಲಿ ಮೂಡಿದೆ. ಹೀಗಾಗಿ ಈ ಎರಡು ಹೆಸರುಗಳ ಪೈಕಿ ಯಾವುದು ಸೂಕ್ತ ಎಂಬ ಚರ್ಚೆ ನಡೆಯುತ್ತಿದೆ.


Udayavani 2 hours ago
Home Flash News