ದಕ್ಷಿಣದ ಹೊಸ ಚಾಣಕ್ಯ; ಸಿದ್ದರಾಮಯ್ಯಗೆ ಸಲಹೆ ನೀಡಿದ್ದ ವ್ಯಕ್ತಿಯಿಂದಲೇ ಟಿಪ್ಸ್ ಪಡೆದಿದ್ರು ನಟ ವಿಜಯ್
ನಟ ವಿಜಯ್ರ ರಾಜಕೀಯ ಯಶಸ್ಸಿನ ಹಿಂದಿರುವ ಚುನಾವಣಾ ತಂತ್ರಗಾರ ಅವರನ್ನು 'ದಕ್ಷಿಣ ಭಾರತದ ಪ್ರಶಾಂತ್ ಕಿಶೋರ್' ಎಂದು ಕರೆಯಲಾಗುತ್ತಿದೆ. ಸಿದ್ದರಾಮಯ್ಯನವರಿಗೂ ಸಲಹೆ ನೀಡಿದ್ದ ಇವರ ತಂತ್ರಗಾರಿಕೆಯಿಂದಲೇ ವಿಜಯ್ ಅಲ್ಪಾವಧಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕದಲ್ಲಿ ಸತತ 2 ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯನವರಿಗೆ 2018ರಲ್ಲಿ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದ ಜಾನ್ ಆರೋಕ್ಯಸಾಮಿ ಎಂಬುವವರೇ ವಿಜಯ್ರ ಟಿವಿಕೆಯನ್ನು ಗೆಲುವಿನತ್ತ ಕೊಂಡೊಯ್ದಿರುವುದು. ಈ ಮೂಲಕ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ಗೆ ಪರ್ಯಾಯವಾಗಿ ದಕ್ಷಿಣದಲ್ಲಿ ಇವರು ಹೆಸರು ಕೇಳಿಬರುತ್ತಿದೆ.
ನಟನಾಗಿದ್ದ ವಿಜಯ್ ಇದ್ದ ಅಭಿಮಾನಿಗಳ ಬಳಗವನ್ನೇ ಅವರ ರಾಜಕೀಯ ಶಕ್ತಿಯಾಗಿ ರೂಪಿಸುವಲ್ಲಿ ಆರೋಕ್ಯ ಸಾಮಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ತಂತ್ರದಿಂದಲೇ ಅಲ್ಪ ಸಮಯದಲ್ಲಿ ರಾಜಕೀಯವಾಗಿಯೂ ವಿಜಯ್ರ ಜನಪ್ರಿಯತೆ ಉತ್ತುಂಗಕ್ಕೇರಲು ಸಾಧ್ಯವಾಗಿದೆ.
ವಿಜಯ್ರ ಭಾಷಣಗಳಿಂದ ಹಿಡಿದು, ಪ್ರಚಾರ, ಸಾಮಾಜಿಕ ಮಾಧ್ಯಮ ಬಳಕೆಯ ವಿಧಾನವನ್ನು ನಿರ್ಧರಿಸಿದವರೂ ಇವರೇ. ಜಾನ್ರ ಶ್ರಮದಿಂದಲೇ ಪೆರಂಬೂರು ಮತ್ತು ತಿರುಚಿರಾಪಳ್ಳಿಯಿಂದ(ಪೂರ್ವ) ಸ್ಪರ್ಧಿಸಿದ್ದ ವಿಜಯ್ ಗೆಲುವಿಗೆ ಮಾತ್ರವಲ್ಲ, ಸಿಎಂ ಕುರ್ಚಿಗೂ ಸಮೀಪ ಹೋಗಲು ಸಾಧ್ಯವಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೂಲತಃ ಆಂಧ್ರಪ್ರದೇಶದವರಾದ ಜಾನ್, ತಮಿಳುನಾಡಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಶಿವಸೇನೆ (ಯುಬಿಟಿ) ಸಲಹೆಗಾರರಾಗಿಯೂ ಇವರು ಕೆಲಸ ಮಾಡಿದ್ದಾರೆ. ಆರೋಕ್ಯಸಾಮಿ ಅವರನ್ನು ದಕ್ಷಿಣದ ಪ್ರಶಾಂತ್ ಕಿಶೋರ್ ಎಂದು ಕರೆಯಲಾಗುತ್ತಿದೆ.