ಐಪಿಎಲ್ ಬ್ಯುಸಿಯ ನಡುವೆ ಬಾಲ್ಯದ ಕೋಚ್ಗಾಗಿ ವಿಮಾನ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ
ಹೊಸದಿಲ್ಲಿ: ಸತತ ಐಪಿಎಲ್ ಪಂದ್ಯಗಳ ಬ್ಯುಸಿ ಶೆಡ್ಯೂಲ್ ಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರು ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ಅವರಿಗಾಗಿ ಸಮಯ ನೀಡಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಕಂಡ ಒಂದು ದಿನದ ನಂತರ, ಕೊಹ್ಲಿ ಅವರು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು. ಬಾಲ್ಯದ ತರಬೇತುದಾರ ರಾಜ್ಕುಮಾರ್ ಶರ್ಮಾ ಅವರೊಂದಿಗೆ ಆರ್ಕೆ ಪುರಂನ ದೆಹಲಿ ಪಬ್ಲಿಕ್ ಶಾಲೆಯಲ್ಲಿ ವೆಸ್ಟ್ ದೆಹಲಿ ಕ್ರಿಕೆಟ್ ಅಕಾಡೆಮಿ (ಡಬ್ಲ್ಯೂಡಿಸಿಎ) ಯ ಹೊಸ ಶಾಖೆಯ ಉದ್ಘಾಟನೆಯಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡರು.
ಗುರುವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಿರ್ಣಾಯಕ ಪಂದ್ಯವಿದ್ದರೂ, ಕೊಹ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿದ ವ್ಯಕ್ತಿಯನ್ನು ಬೆಂಬಲಿಸಲು ರಾಜಧಾನಿಯಲ್ಲಿ ಹೆಚ್ಚುವರಿ ದಿನ ಉಳಿದುಕೊಂಡರು. ಸಮಾರಂಭದಲ್ಲಿ ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಕೂಡ ಭಾಗವಹಿಸಿದ್ದರು. ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ವಿರಾಟ್ ಕೊಹ್ಲಿ ಬೆಂಬಲಿಸಿದರು. ಈ ಸಮಯದಲ್ಲಿ ಓರ್ವ ಕೊಹ್ಲಿ ಕಾಲು ಮುಟ್ಟಿ ನಮಸ್ಕರಿಸಿದ. ಆದರೆ ಕೂಡಲೇ ಹಾಗೆ ಮಾಡಬೇಡಿ ಎಂದು ವಿರಾಟ್ ಹೇಳಿದರು. ಅದರ ಬದಲು ವಿರಾಟ್ ಹ್ಯಾಂಡ್ ಶೇಕ್ ಮಾಡಿದರು. ಬಳಿಕ ವಿರಾಟ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು, "ನಾನು ಹೇಳಬೇಕೆಂದಿರುವುದು ಏನೆಂದರೆ, ಶಾಲೆ ಎಂದರೆ ನೀವು ಕಲಿಯಲು ಬರುವ, ನೀವು ಬೆಳೆಯಲು ಬರುವ, ನೀವು ಉತ್ತಮ ವ್ಯಕ್ತಿಗಳಾಗುವ ಸ್ಥಳ" ಎಂದರು.