'ಕೈ' ಬೇಗುದಿ ದಿಢೀರ್ ಸ್ಫೋಟ!; ಕಾಂಗ್ರೆಸ್ನಲ್ಲಿ ಸಂಚಲನ
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ನ ಅಲ್ಪಸಂಖ್ಯಾತ ನಾಯಕರಲ್ಲಿ ಮಡುಗಟ್ಟಿದ್ದ ಅಸಮಾಧಾನ ಉಪ ಚುನಾವಣೆ ಮರುದಿನವೇ ಸ್ಫೋಟಗೊಂಡಿದೆ. ದಾವಣಗೆರೆಯಲ್ಲಿ ತಮ್ಮದೇ ಪಕ್ಷದಲ್ಲಿನ ಕೆಲ ಅಲ್ಪಸಂಖ್ಯಾತ ನಾಯಕರು ತಮ್ಮ ಅಭ್ಯರ್ಥಿಯನ್ನು ಸೋಲಿಸಲು ಹುನ್ನಾರ ಮಾಡಿದ್ದರು. ಇದರ ಬಗ್ಗೆ ಸ್ವತಃ ಎಐಸಿಸಿ ಪದಾಧಿಕಾರಿಗಳು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೂ ಮಾಹಿತಿ ಇದೆ ಎಂದು ಅಲ್ಪಸಂಖ್ಯಾತ ಶಾಸಕರು ಆರೋಪಿಸಿದ್ದಾರೆ.
ಚುನಾವಣೆ ಮುಗಿದ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಅಲ್ಪಸಂಖ್ಯಾತರ ಜವಾಬ್ದಾರಿ ವಹಿಸಿದ್ದ ಆ ಸಮುದಾಯದ ಶಾಸಕರು ಈ ಅಸಮಾಧಾನವನ್ನು ಹೊರಹಾಕಿದರು. ಅಷ್ಟೇ ಅಲ್ಲ, ತಮ್ಮನ್ನು ಅಲ್ಪಸಂಖ್ಯಾತ ವಿರೋಧಿಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿರುವುದಕ್ಕೂ ತಿರುಗೇಟು ನೀಡಿದರು.
ರಾಜ್ಯ ನಾಯಕರ ಜತೆ ಒಳಗಡೆ ಕುಳಿತಾಗ ಒಪ್ಪಿಕೊಂಡ ಕೆಲ ನಾಯಕರು, ಹೊರಗಡೆ ವಿರೋಧ ಮಾಡಿದ್ದು ಸರಿಯಲ್ಲ. ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ ಎಂದು ಒಂದೇ ಟೇಬಲ್ನಲ್ಲಿ ಕುಳಿತು ಸ್ಪಷ್ಟವಾಗಿ ಒಪ್ಪಿಕೊಂಡು, ನಂತರ ಭಿನ್ನನಡೆ ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತ ಹಿರಿಯ ಮುಖಂಡರಿಂದ ಹುನ್ನಾರ:ಮೇಲ್ಮನೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್ ಮಾತನಾಡಿ, ‘ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು, ಪಕ್ಷದ ಎಲ್ಲ ಅಲ್ಪಸಂಖ್ಯಾತ ನಾಯಕರಿಗೆ ಜವಾಬ್ದಾರಿ ನೀಡಿದ್ದರು. ಜತೆಗೆ ನನಗೆ ಹಾಗೂ ರಿಜ್ವಾನ್ ಅರ್ಷದ್ ಅವರಿಗೆ ಇತರೆ ಜವಾಬ್ದಾರಿ ನೀಡಿದ್ದರು. ಅದನ್ನು ಸುಸೂತ್ರವಾಗಿ ನಾವು ಮಾಡಿದ್ದೇವೆ. ಆದರೆ, ಪಕ್ಷದ ಒಂದಿಷ್ಟು ಅಲ್ಪಸಂಖ್ಯಾತ ಹಿರಿಯ ಮುಖಂಡರು ಪಕ್ಷವನ್ನು ಸೋಲಿಸಲು ದೊಡ್ಡ ಷಡ್ಯಂತ್ರ ಮತ್ತು ಹುನ್ನಾರ ಮಾಡಿದ್ದಾರೆ’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಆರೋಪಿಸಿದರು.
‘ಆದಾಗ್ಯೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ.
ಇದರ ಬಗ್ಗೆ ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯವರಿಗೆ ಮಾಹಿತಿಯಿದೆ. ಎಲ್ಲ ಅಲ್ಪಸಂಖ್ಯಾತ ಮುಖಂಡರ ಒಪ್ಪಿಗೆ ಮೇರೆಗೆ ಸಮರ್ಥ್ ಅವರಿಗೆ ಟಿಕೆಟ್ ನೀಡಲಾಗಿತ್ತು. ನಮ್ಮನ್ನೆಲ್ಲ ಕೂರಿಸಿಕೊಂಡೇ ಒಪ್ಪಿಗೆ ಪಡೆಯಲಾಗಿತ್ತು. ಆದರೂ ಒಂದಿಷ್ಟು ತಪ್ಪು ಗ್ರಹಿಕೆ ಉಂಟಾಯಿತು. ಖ್ವಾಜಾ ಬಂದೇ ನವಾಜ್ ಗುರುಗಳು ಬಂದು ಕಾಂಗ್ರೆಸ್ ಪರವಾಗಿ ಸಂದೇಶ ನೀಡಿದರು. ಬಿಜೆಪಿಗೆ ಅವಕಾಶ ಸಿಗುವುದು ಬೇಡ ಎಂದಿದ್ದರು’ ಎಂದು ಮಾಹಿತಿ ನೀಡಿದರು.
ಒಳಗಡೆ ಒಪ್ಪಿ ಹೊರಗಡೆ ವಿರೋಧ ಸರಿಯಲ್ಲ:
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ‘ಜವಾಬ್ದಾರಿ ನೀಡಿದ ಮೇಲೆ ಪ್ರತಿಯೊಬ್ಬ ಅಲ್ಪಸಂಖ್ಯಾತ ಶಾಸಕರು ದಾವಣಗೆರೆಗೆ ತೆರಳಿ ಕೆಲಸ ಮಾಡಿದ್ದಾರೆ. ಸಮುದಾಯದ ದ್ರೋಹಿಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳುವುದು ಸರಿಯಲ್ಲ. ಒಳಗಡೆ ಒಪ್ಪಿಕೊಂಡು ಹೊರಗಡೆ ವಿರೋಧ ಮಾಡುವುದು ಸರಿಯಲ್ಲ. ಹೀಗಿದ್ದರೆ ಮೊದಲೇ ಒಪ್ಪಿಕೊಳ್ಳಬಾರದಿತ್ತು. ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ ಎಂದು ಒಂದೇ ಟೇಬಲ್ನಲ್ಲಿ ಕುಳಿತು ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ’ ಎಂದು ತೀಕ್ಷ್ಣವಾಗಿ ಹೇಳಿದರು.