ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರಕ್ಕಿಳಿದ ವಿಜಯ್ ಕಟೌಟ್
ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಎಲ್ಲ ಅಭ್ಯರ್ಥಿಗಳಿಗೂ ತಮ್ಮ ನಾಯಕ, ಜನಪ್ರಿಯ ನಟ ವಿಜಯ್ ಅವರು ಖುದ್ದು ಪ್ರಚಾರ ಮಾಡಬೇಕೆಂಬ ಬಯಕೆ ಇರುವುದು ಸಹಜ. ಆದರೆ, ತಮಿಳುನಾಡು ಪೊಲೀಸರು ವಿಧಿಸಿರುವ ಕಟ್ಟುನಿಟ್ಟಿನ ಷರತ್ತಿನಿಂದಾಗಿ ವಿಜಯ್ ಅವರು ಎಲ್ಲ ಕ್ಷೇತ್ರಗಳಿಗೂ ಹೋಗಿ ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ತಿರುಚಿರಾಪಳ್ಳಿಯ ತಿರುವೇರಂಬೂರು ಕ್ಷೇತ್ರದ ಅಭ್ಯರ್ಥಿ ನವಲ್ಪಟ್ಟು ವಿಜಿ ಅವರು ತಮ್ಮ ಪರವಾಗಿ ವಿಜಯ್ ಅವರೇ ಬಂದು ಪ್ರಚಾರ ಮಾಡುತ್ತಿದ್ದಾರೆ ಎಂದು ತೋರಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಕೈಮುಗಿದು ನಿಂತಿರುವ ವಿಜಯ್ ಅವರ ಪೂರ್ಣ ಪ್ರಮಾಣದ ಕಟೌಟ್ನೊಂದಿಗೆ ವಿಜಿ ಅವರು ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಪ್ರಚಾರದ ವಾಹನದಲ್ಲಿ ಪ್ರಮುಖವಾಗಿ ಕಾಣಿಸುವಂತೆ ಕಟೌಟ್ ನಿಲ್ಲಿಸಿ ಅದಕ್ಕೆ ಟಿವಿಕೆ ಪಕ್ಷದ ಕೆಂಪು–ಹಳದಿ ಧ್ವಜವನ್ನು ಹೊದಿಸಿದ್ದಾರೆ.
15 ದಿನಗಳ ಹಿಂದೆ ಡಿಎಂಕೆ ತೊರೆದು ಟಿವಿಕೆ ಸೇರಿದ್ದ ವಿಜಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರ ವಿರುದ್ಧ ಸ್ಪರ್ಧಿಸಿದ್ದಾರೆ. ವಿಜಿ ಮಾತ್ರವಲ್ಲದೆ, ತಿರುಚಿರಾಪಳ್ಳಿ ಜಿಲ್ಲೆಯ ಟಿವಿಕೆ ಅಭ್ಯರ್ಥಿಗಳು ಏಪ್ರಿಲ್ 2ರಂದು ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ತಮ್ಮನ್ನು ವಿಜಯ್ ಅವರೇ ಪರಿಚಯಿಸುತ್ತಾರೆ ಎಂದು ಆಶಿಸಿದ್ದರು. ಆದರೆ, ವಿಜಯ್ ಅವರು ತಮ್ಮ ಪ್ರಚಾರ ವಾಹನದ ಮೇಲೆ ಏಕಾಂಗಿಯಾಗಿ ಕಾಣಿಸಿಕೊಂಡು ಸುಮಾರು 15 ನಿಮಿಷ ಜನರೊಂದಿಗೆ ಮಾತನಾಡಿದ್ದರು.
ಚುನಾವಣಾ ಪ್ರಚಾರದ ವೇಳೆ ವಿಜಯ್ ಅವರ ಉಪಸ್ಥಿತಿ ಇರುವಂತೆ ತೋರಿಸುವ ಉದ್ದೇಶದಿಂದ ಕಟೌಟ್ಗಳ ಮೊರೆಹೋಗಿದ್ದಾರೆ. ಆ ಮೂಲಕ ವಿಜಯ್ ಅವರ ಹೆಸರಿನಲ್ಲಿ ಮತ ಯಾಚಿಸುತ್ತಿರುವುದು ಕಂಡುಬರುತ್ತಿದೆ.
ಡಿಎಂಕೆ ಮತ್ತು ಎಐಎಡಿಎಂಕೆಯ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ತಾರಾ ಪ್ರಚಾರಕರು ಇರುವಂತೆ ಟಿವಿಕೆ ಬಳಿ ಇಲ್ಲ.
ಆ ಪಕ್ಷದಲ್ಲಿರುವ ಏಕೈಕ ಸ್ಟಾರ್ ವಿಜಯ್ ಮಾತ್ರ.
ವಿಜಯ್ ಅವರು 2024ರಲ್ಲಿ ಟಿವಿಕೆಯನ್ನು ಸ್ಥಾಪಿಸಿದ್ದ ನಂತರ ಕೇವಲ 10 ಜಿಲ್ಲೆಗಳಿಗೂ ಭೇಟಿ ನೀಡಿಲ್ಲ. ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗಿದ್ದಲೂ ಅವರು ಪ್ರಚಾರ ಕಾರ್ಯದಿಂದ ದೂರ ಉಳಿಯುವಂತಾಗಿತ್ತು.
ವಿಜಯ್ ಅವರ ಕಟೌಟ್ ಬಳಸಿ ಮತ ಕೇಳುತ್ತಿರುವ ವಿಜಿ ಅವರ ವಿಡಿಯೊ ಈಗ ಸಾಮಾಜಿಕ ಮಾಧ್ಯಮ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅನೇಕರು ಟಿವಿಕೆ ಅಭ್ಯರ್ಥಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ಆಡಳಿತಾರೂಢ ಡಿಎಂಕೆಗೆ ನಿಷ್ಠರಾಗಿರುವ ಅನೇಕರು ಟಿವಿಕೆ ಮತ್ತು ವಿಜಯ್ ಅವರನ್ನು ಗೇಲಿ ಮಾಡಿದ್ದಾರೆ.
‘ತಿರುವೇರಂಬೂರಿನ ಟಿವಿಕೆ ಅಭ್ಯರ್ಥಿ ಒಬ್ಬ ಪ್ರಾಯೋಗಿಕ ರಾಜಕಾರಣಿ. ತನಗೆ ಸಾಧ್ಯವಿರುವುದನ್ನು ಮಾಡುತ್ತಾರೆ. ಇತರರಂತೆ ಅವರು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ’ ಎಂದು ಡಿಎಂಕೆ ಕಾರ್ಯಕರ್ತ ಎಸ್ಕೆಪಿ ಕರುಣಾ ಟೀಕಿಸಿದ್ದಾರೆ.