ಅಯೋಧ್ಯೆ: 6 ತಿಂಗಳಲ್ಲಿ 11ಕೋಟಿ ಭಕ್ತರ ಭೇಟಿ; ಆರ್ಥಿಕತೆಯಲ್ಲಿ ಐತಿಹಾಸಿಕ ಬದಲಾವಣೆ
ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಯ ನಂತರ ನಗರದ ಆರ್ಥಿಕತೆಯಲ್ಲಿ ಐತಿಹಾಸಿಕ ಬದಲಾವಣೆ ಕಂಡುಬಂದಿದೆ. ಮೊದಲ ಆರು ತಿಂಗಳಲ್ಲಿ ಸುಮಾರು 11 ಕೋಟಿ ಭಕ್ತರು ಭೇಟಿ ನೀಡಿದ್ದು, ಸ್ಥಳೀಯ ವ್ಯಾಪಾರಿಗಳ ಆದಾಯದಲ್ಲಿ ಐದು ಪಟ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಈ ಬೆಳವಣಿಗೆಯಿಂದ ಅಯೋಧ್ಯೆ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
‘The Economic Renaissance of Ayodhya, India: A Case Study on Sri Ram Mandir’ ಎಂಬ ಶೀರ್ಷಿಕೆಯಡಿ Indian Institute of Management Lucknow (IIM-ಲಖನೌ) ಅಧ್ಯಯನ ನಡೆಸಿದ್ದು, ಮಂದಿರ ನಿರ್ಮಾಣದ ಮೊದಲು ಮತ್ತು ನಂತರದ ಆರ್ಥಿಕ ಪರಿಸ್ಥಿತಿಯ ತುಲನಾತ್ಮಕ ವಿಶ್ಲೇಷಣೆ ಮಾಡಲಾಗಿದೆ. ಮಂದಿರದ ಸುತ್ತಮುತ್ತಲಿನ ಆಸ್ತಿ ಮೌಲ್ಯ ಐದು ರಿಂದ ಹತ್ತು ಪಟ್ಟು ಹೆಚ್ಚಿದ್ದು, ರಿಯಲ್ ಎಸ್ಟೇಟ್ ದರವು ಶೇ 25 ರಿಂದ 40ರಷ್ಟು ಏರಿಕೆಯಾಗಿದೆ. 150ಕ್ಕೂ ಹೆಚ್ಚು ಹೊಸ ಹೋಟೆಲ್ಗಳು ಹಾಗೂ ಹೋಂ-ಸ್ಟೇಗಳು ಆರಂಭಗೊಂಡಿದ್ದು, ಆನ್ಲೈನ್ ಬುಕ್ಕಿಂಗ್ಗಳು ಶೇ 400ರಷ್ಟು ಹೆಚ್ಚಿವೆ.
ಪ್ರವಾಸೋದ್ಯಮ ಚಟುವಟಿಕೆಗಳಿಂದ ಸರ್ಕಾರಕ್ಕೆ ₹20,000 ರಿಂದ ₹24,000 ಕೋಟಿ ತೆರಿಗೆ ಆದಾಯ ಬರಬಹುದೆಂದು ಅಧ್ಯಯನ ಅಂದಾಜಿಸಿದೆ. ಆತಿಥ್ಯ, ನಿರ್ಮಾಣ, ಸಾರಿಗೆ ಮತ್ತು ಸೇವಾ ವಲಯಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಪ್ರತಿದಿನ ಸುಮಾರು ಎರಡು ಲಕ್ಷ ಭಕ್ತರು ಭೇಟಿ ನೀಡುತ್ತಿದ್ದು, ಮುಂದಿನ 4-5 ವರ್ಷಗಳಲ್ಲಿ ಸುಮಾರು 1.2 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.