ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ಶಿವನ ದೇವಾಲಯಗಳಿವು
ಶಿವನು ಯೋಗಿಗಳಿಗೆ ಮಹಾಯೋಗಿ, ಗೃಹಸ್ಥರಿಗೆ ಮಹಾಕುಟುಂಬಿ. ಎಲ್ಲ ತಪಸ್ಸುಗಳಿಗೆ ಫಲ ನೀಡುವವನು, ನಮಿಸಿದ ಭಕ್ತರ ಮನೋಭಿಲಾಷೆಗಳನ್ನು ಪೂರೈಸುವ ದೈವ. ಆದ್ದರಿಂದಲೇ ಶಿವನ ಆರಾಧನೆ ನಿರಂತರವಾಗಿಯೇ ನಡೆಯುತ್ತದೆ. ವಿಶೇಷವಾಗಿ ಮಹಾಶಿವರಾತ್ರಿಯಂದು ಭಕ್ತರು ದೇವಾಲಯಗಳಿಗೆ ತೆರಳಿ ನೀರು, ಹಾಲಿನ ಅಭಿಷೇಕ ಮಾಡಿ, ಬಿಲ್ವಪತ್ರೆ ಹಾಗೂ ಪುಷ್ಪಗಳಿಂದ ಪೂಜೆ ಸಲ್ಲಿಸುತ್ತಾರೆ. ಈ ಬಾರಿ ಫೆಬ್ರುವರಿ 15ರಂದು ಮಹಾಶಿವರಾತ್ರಿ ಆಚರಿಸಲಾಗುತ್ತಿದ್ದು, ಶಿವನ ದರ್ಶನಕ್ಕೆ ಅನೇಕ ಪುಣ್ಯಕ್ಷೇತ್ರಗಳು ಭಕ್ತರನ್ನು ಆಕರ್ಷಿಸುತ್ತವೆ.
ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನ ಶಿವರಾತ್ರಿಯಂದು ಭೇಟಿಗೆ ಅತ್ಯುತ್ತಮ ಸ್ಥಳ. ಕದಂಬರ ಕಾಲದ ಈ ಐತಿಹಾಸಿಕ ದೇವಾಲಯದಲ್ಲಿ ಶೈವಾಗಮ ಪದ್ಧತಿಯಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ. ಸಮೀಪದ ಗುಡ್ನಾಪುರದ ಬಂಗಾರೇಶ್ವರ ದೇವಾಲಯದಲ್ಲಿಯೂ ವಿಶೇಷ ಪೂಜೆ ಜರುಗುತ್ತದೆ. ಹಾಗೆಯೇ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ, ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನ ಮುಂತಾದ ಕ್ಷೇತ್ರಗಳು ಸಾವಿರಾರು ಭಕ್ತರನ್ನು ಸೆಳೆಯುತ್ತವೆ.
ಕೋಟಿಲಿಂಗೇಶ್ವರದಲ್ಲಿ 108 ಅಡಿ ಎತ್ತರದ ಭವ್ಯ ಶಿವಲಿಂಗ ಮತ್ತು ನಂದಿ ವಿಗ್ರಹ ಪ್ರಮುಖ ಆಕರ್ಷಣೆ.
ಇನ್ನು ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನ, ಶಿರಸಿ ಸಮೀಪದ ಸಹಸ್ರಲಿಂಗ, ಹಂಪಿಯ ವಿರೂಪಾಕ್ಷ ದೇವಾಲಯ ಹಾಗೂ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಶಿವಭಕ್ತರಿಗೆ ಪವಿತ್ರ ಕ್ಷೇತ್ರಗಳಾಗಿವೆ. ಗೋಕರ್ಣದಲ್ಲಿ ಆತ್ಮಲಿಂಗವನ್ನು ಮುಟ್ಟಿ ನಮಸ್ಕರಿಸುವ ಅವಕಾಶ ಇರುವುದರಿಂದ ಇದು ವಿಶೇಷ ಮಹತ್ವ ಪಡೆದಿದೆ. ಬೆಂಗಳೂರಿನ ಗವಿಗಂಗಾಧರೇಶ್ವರ ಹಾಗೂ ಕಾಡು ಮಲ್ಲೇಶ್ವರ ದೇವಸ್ಥಾನಗಳಲ್ಲಿಯೂ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತಿದ್ದು, ಭಕ್ತರು ಭಕ್ತಿಭಾವದಿಂದ ಶಿವನ ಅನುಗ್ರಹ ಪಡೆಯುತ್ತಾರೆ.