ಹಿಮಂತ ಬಿಸ್ವಾ ಶರ್ಮಾ ಆಡಳಿತಕ್ಕೆ ಅಸ್ಸಾಂ ಜನತೆಯ ಮೊಹರು, ವಿರೋಧ ಪಕ್ಷಗಳ ಕೋಟೆ ಧ್ವಂಸ, ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಕಾರಣಗಳೇನು?
ಗುವಾಹಟಿ, ಮೇ 04: ದೇಶದ ಇತರ ಮೂರು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ (Anti-incumbency) ಸರ್ಕಾರಗಳನ್ನು ಬುಡಮೇಲು ಮಾಡುತ್ತಿದ್ದರೆ, ಅಸ್ಸಾಂನಲ್ಲಿ ಮಾತ್ರ ಬಿಜೆಪಿ ಈ ಪ್ರವೃತ್ತಿಯನ್ನು ತಲೆಕೆಳಗಾಗಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ಅವರ ನೇತೃತ್ವದ ತಂಡವು ಅಸ್ಸಾಂನಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರಿದೆ. ಅಸ್ಸಾಂ ವಿಧಾನಸಭೆ ಚುನಾವಣೆ 2026ರ ಫಲಿತಾಂಶಗಳು ಹೊರಬೀಳುತ್ತಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರ ಮತ್ತು ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಅಸ್ಸಾಂ ಬಿಜೆಪಿ ತಂಡವು ಈ ಮೈಲಿಗಲ್ಲನ್ನು ತಲುಪಿದೆ. ಇತರ ರಾಜ್ಯಗಳಲ್ಲಿ ಸರ್ಕಾರಗಳು ಪತನಗೊಳ್ಳುತ್ತಿರುವಾಗ, ಅಸ್ಸಾಂನಲ್ಲಿ ಬಿಜೆಪಿ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವುದು ರಾಜಕೀಯ ವಿಶ್ಲೇಷಕರನ್ನು ಆಶ್ಚರ್ಯಚಕಿತಗೊಳಿಸಿದೆ.
ಅಭಿವೃದ್ಧಿ ಕಾರ್ಡ್: ಸಾರಿಗೆ ಮತ್ತು ಮೂಲಸೌಕರ್ಯಗಳಲ್ಲಿ ಹಿಮಂತ ಬಿಸ್ವ ಶರ್ಮಾ ತಂದ ಬದಲಾವಣೆಗಳು ಗ್ರಾಮೀಣ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸುಸ್ಥಿರ ಆಡಳಿತ: ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿರುವುದರಿಂದ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುವುದಿಲ್ಲ ಎಂಬ ಜನರ ನಂಬಿಕೆ ಬಿಜೆಪಿಗೆ ವರದಾನವಾಗಿದೆ. ಹೋರಾಟ: ಅಸ್ಸಾಂನ ಸಾಂಸ್ಕೃತಿಕ ಅಸ್ಮಿತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಸಂಯೋಜಿಸಿ ಚುನಾವಣೆ ಎದುರಿಸಿದ ಶರ್ಮಾ ಅವರ ಕಾರ್ಯತಂತ್ರ ಜಯ ತಂದಿದೆ.
ಬಿಜೆಪಿಯ ತಳಮಟ್ಟದ ಸಂಘಟನಾ ಶಕ್ತಿಯ ಮುಂದೆ ವಿರೋಧ ಪಕ್ಷಗಳ ಮೈತ್ರಿಕೂಟವು ಮಂಕಾಗಿದೆ.ಹಿಮಂತ ಬಿಸ್ವಾ ಶರ್ಮಾ ಅವರ ಆಕ್ರಮಣಕಾರಿ ನಾಯಕತ್ವ ಮತ್ತು ಮೋದಿ-ನಿತೀನ್ ನಬಿನ್ ಅವರ ಮಾರ್ಗದರ್ಶನ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ನಕಲಿ ಮತದಾರರನ್ನು ತೆಗೆದುಹಾಕಿದ್ದು ಸಹ ಪರೋಕ್ಷವಾಗಿ ಬಿಜೆಪಿಗೆ ಸಹಕಾರಿಯಾಗಿದೆ. ನುಸುಳುಕೋರರ ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದು, ನೈಜ ಮತದಾರರ ಶಕ್ತಿಯನ್ನು ಹೆಚ್ಚಿಸಿತು, ಇದು ಬಿಜೆಪಿಯಂತಹ ಪಕ್ಷಗಳಿಗೆ ಕಾರ್ಯತಂತ್ರ ರೂಪಿಸಲು ನೆರವಾಯಿತು.