ದಾವಣಗೆರೆ ಉಪ ಕದನ: ಕಾಂಗ್ರೆಸ್ನಲ್ಲಿ ಮುಸ್ಲಿಂ ನಾಯಕರ ಜಗಳ ಸ್ಫೋಟ; ಜಬ್ಬಾರ್ ರಾಜೀನಾಮೆ
ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಆರಂಭವಾದ ಅಸಮಾಧಾನ ಆ ಬಳಿಕ ಕಾಂಗ್ರೆಸ್ನ ಮುಸ್ಲಿಂ ಸಮುದಾಯದ ನಾಯಕರ ನಡುವಿನ ಭಿನ್ನಮತ ಮತ್ತಷ್ಟು ಸ್ಫೋಟಗೊಂಡಿದೆ. ಈ ಬೆನ್ನಲ್ಲೇ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿರುವ ಸಂಗತಿ ಬಹಿರಂಗಗೊಂಡಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗದ ಕಾರಣಕ್ಕೆ ಕಾಂಗ್ರೆಸ್ನ ಕೆಲವು ಪ್ರಭಾವಿ ಮುಸ್ಲಿಂ ನಾಯಕರು ಪ್ರಚಾರದಿಂದ ದೂರ ಉಳಿದಿದ್ದರು. ಕೇರಳ ಚುನಾವಣೆಯ ಉಸ್ತುವಾರಿಯಲ್ಲಿದ್ದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೊನೆಗಳಿಗೆಯಲ್ಲಿ ದಾವಣಗೆರೆಯಲ್ಲಿ ಪ್ರಚಾರ ನಡೆಸಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಬೆಂಬಲ ಸೂಚಿಸಿದರು.
ಹಾಗಿದ್ದರೂ, ಜಮೀರ್ ಅಹಮದ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಗೂ ಪರಿಷತ್ ಸದಸ್ಯರೂ ಆಗಿರುವ ಅಬ್ದುಲ್ ಜಬ್ಬಾರ್ ಅವರು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲಿಲ್ಲ ಎಂಬ ದೂರು ವರಿಷ್ಠರಿಗೆ ಸಲ್ಲಿಕೆಯಾಗಿತ್ತು. ಪಕ್ಷದ ನಾಯಕರ ಜತೆ ಸಮಾಲೋಚಿಸಿದ್ದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ತ ಅವರು ಹೈಕಮಾಂಡ್ಗೆ ಈ ಬಗ್ಗೆ ವರದಿ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸುದ್ದಿಗೋಷ್ಠಿಯಲ್ಲಿ ಪರೋಕ್ಷವಾಗಿ ಟೀಕೆ:
ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ವಿಧಾನಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್ ಹಾಗೂ ಶಿವಾಜಿನಗರ ಕ್ಷೇತ್ರ ಶಾಸಕ, ಚುನಾವಣೆ ಉಸ್ತುವಾರಿ ಹೊಂದಿದ್ದ ರಿಜ್ವಾನ್ ಅರ್ಷದ್ ‘ಪಕ್ಷದ ಅಭ್ಯರ್ಥಿ ಸೋಲಿಗೆ ತಮ್ಮ ಸಮುದಾಯದ ಕೆಲವು ಹಿರಿಯ ನಾಯಕರು ಷಡ್ಯಂತ್ರ ನಡೆಸಿದ್ದಾರೆ’ ಎಂದು ದೂರಿದ್ದರು. ಅಭಿಷೇಕ್ ದತ್ತ ವರದಿ ಹಾಗೂ ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅವರ ಸುದ್ದಿಗೋಷ್ಠಿಯ ಬೆನ್ನಲ್ಲೇ, ಹೊಸ ವಿದ್ಯಮಾನಗಳು ಕಾಂಗ್ರೆಸ್ನಲ್ಲಿ ಶುರುವಾಗಿವೆ.
ಮಾರ್ಚ್ 3ರಂದೇ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಅದು ಶುಕ್ರವಾರ (ಮಾ.11)ಕ್ಕೆ ಬಹಿರಂಗವಾಗಿದೆ.
ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಅವರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ತಾಕೀತು ಮಾಡಿದೆ ಎಂದು ಗೊತ್ತಾಗಿದೆ. ಸಂಪುಟ ಪುನರ್ರಚನೆಯ ವೇಳೆ ಸಚಿವ ಜಮೀರ್ ಅಹಮದ್ ಅವರನ್ನು ಕೈಬಿಡಲಾಗುತ್ತಿದೆ ಎಂಬ ವದಂತಿ ಪಕ್ಷದ ವಲಯದಲ್ಲಿ ಹಬ್ಬಿದೆ.
ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಕೆಲವು ನಾಯಕರು ಪಟ್ಟು ಹಿಡಿದಿದ್ದರು.
ಅಬ್ದುಲ್ ಜಬ್ಬಾರ್ ರಾಜೀನಾಮೆ ಪರಿಶೀಲಿಸುವೆ: ಡಿ.ಕೆ.ಶಿವಕುಮಾರ್
ದಾವಣಗೆರೆ ಉಪ ಚುನಾವಣೆ ವಿಚಾರವಾಗಿ ಈಗ ಸದ್ಯ ನಾನು ಏನೂ ಮಾತನಾಡಲ್ಲ. ನನಗೂ ಕೆಲವು ವರದಿಗಳು ಬಂದಿವೆ. ಸ್ಥಳೀಯರಿಂದಲೂ ವರದಿ
ತರಿಸಿಕೊಂಡು ಪರಿಶೀಲಿಸಿದ ಬಳಿಕ ಮಾತನಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದಾವಣಗೆರೆ ಉಪಚುನಾವಣೆಯಲ್ಲಿ ತಮ್ಮದೇ ಸಮುದಾಯದ ಹಿರಿಯ ನಾಯಕರು ಷಡ್ಯಂತ್ರ ಮಾಡಿದರು ಎಂಬುದಾಗಿ ಕಾಂಗ್ರೆಸ್ನ ಕೆಲ ಅಲ್ಪಸಂಖ್ಯಾತ ನಾಯಕರು ಆರೋಪ ಮಾಡಿದ್ದಾರೆ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಉತ್ತರಿಸಿದ ಅವರು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ಪತ್ರ ಕೊಟ್ಟಿದ್ದಾರೆ. ಅದನ್ನು ನಾನು ಪರಿಶೀಲಿಸುತ್ತೇನೆ. ನನಗೂ ಏನೇನೂ ವರದಿಗಳು ಬಂದಿವೆ. ಸ್ಥಳೀಯರಿಂದಲೂ ವರದಿ ಪಡೆದು ಬಳಿಕ ಮಾತನಾಡುತ್ತೇನೆ ಎಂದರು.