ಜಗತ್ತೇ ತಲೆಕೆಳಗಾದರೂ, ನಾನು ನಂಬೋದು ಕಠಿಣ ಪರಿಶ್ರಮವನ್ನಷ್ಟೇ: ಹಾರ್ದಿಕ್ ಪಾಂಡ್ಯ
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ತಮ್ಮ ವೃತ್ತಿಜೀವನದ ಕುರಿತು ಭಾನುವಾರ ಮಾತನಾಡಿದ್ದಾರೆ. ಆರಂಭದಲ್ಲಿ ಬ್ಯಾಟರ್ ಆಗಿ ಮಾತ್ರವೇ ಆಡುತ್ತಿದ್ದ ಅವರು, ಟೀಂ ಇಂಡಿಯಾ ಪಾಲಿಗೆ ಅತ್ಯಂತ ಮೌಲ್ಯಯುತ ಆಟಗಾರನಾಗಿ ಬೆಳೆದದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ. 2013ರಲ್ಲಿ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅವರು, ಭಾರತ ತಂಡವು ಟಿ20 ಮಾದರಿಯಲ್ಲಿ ಸತತ ಎರಡು ವಿಶ್ವಕಪ್ ಗೆಲ್ಲುವವರೆಗೆ ಬಹಳ ದೂರ ಸಾಗಿ ಬಂದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಪಾಂಡ್ಯ, '17–19ನೇ ವಯಸ್ಸಿನಲ್ಲಿದ್ದಾಗ ನಾನು ಕೇವಲ ಬ್ಯಾಟರ್ ಆಗಿ ಅಡುತ್ತಿದ್ದೆ. ಆಗ ನನಗೆ ಗೊತ್ತಿದ್ದದ್ದು ಒಂದೇ ಒಂದು ವಿಚಾರ. ಯಾರಾದರೂ ನನಗೆ 12 ಸುತ್ತು ಓಡಲು ಹೇಳಿದರೆ; ನಾನು 15 ಸುತ್ತು ಓಡುತ್ತಿದ್ದೆ. ಆ ಹಂತದಲ್ಲಿ ಯಾರೋ ನನ್ನನ್ನು ಗಮನಿಸಿದರು.
ಒಂದು ವರ್ಷದ ನಂತರ ರಣಜಿ ಟ್ರೋಫಿಯಲ್ಲಿ ಆಡುವ ಅವಕಾಶ ಲಭಿಸಿತು' ಎಂದು ಹೇಳಿದ್ದಾರೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪಾಂಡ್ಯ, ಟೀಂ ಇಂಡಿಯಾ ಪಾಲಿಗೆ 'ಟು ಇನ್ ವನ್' ಆಟಗಾರನಾಗಿದ್ದಾರೆ. ಭಾರತ ತಂಡವು 2024 ಹಾಗೂ 2026ರಲ್ಲಿ ವಿಶ್ವಕಪ್ ಗೆಲ್ಲುವಲ್ಲಿ ಅವರು ನಿರ್ಣಾಯಕ ಪಾತ್ರವಹಿಸಿದ್ದರು. ತಮ್ಮ ಸಾಮರ್ಥ್ಯವನ್ನು ಗುರುತಿಸಿ ಅವಕಾಶ ನೀಡಿದ್ದಕ್ಕಾಗಿ ಮುಂಬೈ ತಂಡದ ಪ್ರತಿಭಾ ಪರಿಶೋಧನಾ ಸಿಬ್ಬಂದಿ ಬಗ್ಗೆ ಕಾರ್ಯಕ್ರಮದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದೇ ವೇಳೆ, ತಮ್ಮ ಕಠಿಣ ಪರಿಶ್ರಮ, ಸ್ವಯಂ ಸುಧಾರಣೆಗೆ ನೀಡಿದ ಆದ್ಯತೆಯ ಕುರಿತೂ ಉಲ್ಲೇಖಿಸಿದ್ದಾರೆ.
'ನಾನು ರಣಜಿ ಆಡುವುದನ್ನು ನೋಡಲು ಮುಂಬೈ ಇಂಡಿಯನ್ಸ್ ಸಿಬ್ಬಂದಿ ಬಂದಿರಲಿಲ್ಲ. ಆದಾಗ್ಯೂ, ನನ್ನಲ್ಲೇನೋ ವಿಶೇಷತೆ ಇದೆ ಎಂಬುದನ್ನು ಅವರು ಗುರುತಿಸಿದರು.
ಅದು ಪ್ರತಿಭಾ ಪರಿಶೋಧನೆ ವಿಚಾರದಲ್ಲಿ ಎಂಐ ಸ್ಕೌಟಿಂಗ್ ತಂಡ ಹೊಂದಿರುವ ಸಾಮರ್ಥ್ಯವನ್ನು ತೋರಿಸುತ್ತದೆ' ಎಂದು ಹೇಳಿದ್ದಾರೆ.
'ದೇಹವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ನನಗೆ ಒಂದಿಷ್ಟೂ ತಿಳಿದಿರಲಿಲ್ಲ. ಎಷ್ಟೇ ಒತ್ತಡವಿದ್ದರೂ, ಅದನ್ನು ನಿಭಾಯಿಸುವುದು ಹೇಗೆ ಎಂಬುದಷ್ಟೇ ನನಗೆ ಗೊತ್ತಿತ್ತು. ಜಗತ್ತೇ ತಲೆಕೆಳಗಾದರೂ, ನಾನು ನಂಬುವುದು ಕಠಿಣ ಪರಿಶ್ರಮವನ್ನಷ್ಟೇ. ಅದನ್ನೇ ಯುವಕರಿಗೂ ಹೇಳುತ್ತೇನೆ' ಎಂದಿದ್ದಾರೆ.
6ನೇ ಪ್ರಶಸ್ತಿ ಮೇಲೆ ಮುಂಬೈ ಕಣ್ಣು
ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿರುವ ಮುಂಬೈ, ಈವರೆಗೆ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಐದೂ ಸಲ ರೋಹಿತ್ ಶರ್ಮಾ ನಾಯಕರಾಗಿದ್ದರು. ಸದ್ಯ ಪಾಂಡ್ಯ ತಂಡದ ಹೊಣೆ ನಿಭಾಯಿಸುತ್ತಿದ್ದು, 6ನೇ ಪ್ರಶಸ್ತಿ ಜಯಿಸುವ ಲೆಕ್ಕಾಚಾರದೊಂದಿಗೆ ಮುಂಬೈ ಕಣಕ್ಕಿಳಿಯುತ್ತಿದೆ.
ಪಾಂಡ್ಯ, 2022 ಹಾಗೂ 2023ರ ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಿದ್ದರು. ಟೈಟನ್ಸ್ ಪಾಲಿಗೆ ಚೊಚ್ಚಲ ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದುಕೊಟ್ಟಿದ್ದ ಅವರನ್ನು, 2024ರಲ್ಲಿ ವಾಪಸ್ ಕರೆಸಿಕೊಂಡಿರುವ ಮುಂಬೈ, ರೋಹಿತ್ ಅವರನ್ನು ಕೆಳಗಿಳಿಸಿ ನಾಯಕತ್ವವನ್ನೂ ವಹಿಸಿಕೊಟ್ಟಿದೆ.