ಭಾಂಗರ್ ಬಾಂಬ್ ಸ್ಫೋಟ ಪ್ರಕರಣ: ಪಶ್ಚಿಮ ಬಂಗಾಳದ ಹಲವೆಡೆ ಎನ್ಐಎ ದಾಳಿ
ಕೋಲ್ಕತ್ತ: ಈಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಭಾಂಗರ್ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಸಂಬಂಧ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ದಕ್ಷಿಣ 24 ಪರಗಣ ಜಿಲ್ಲೆಯ ಟಿಎಂಸಿ ಮಾಜಿ ಶಾಸಕ ಸೌಕತ್ ಮೊಲ್ಲಾ ಅವರ ನಿವಾಸ ಸೇರಿದಂತೆ ಹಲವಡೆ ದಾಳಿ ನಡೆಸಿದೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿಯೊಂದಿಗೆ ತೆರಳಿರುವ ಎನ್ಐಎ ತಂಡವು, ಭಾಂಗರ್ ಪ್ರದೇಶದ ಮೌಖಾಲಿಯಲ್ಲಿರುವ ಮೊಲ್ಲಾ ಅವರ ನಿವಾಸದಲ್ಲಿ ಶೋಧ ನಡೆಸುತ್ತಿದೆ. ಅಲ್ಲದೆ, ಸ್ಫೋಟ ಸಂಭವಿಸಿದ್ದ ಬಾಮುನಿಯಾ ಗ್ರಾಮಕ್ಕೂ ಎನ್ಐಎ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 19ರಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾಮುನಿಯಾ ಗ್ರಾಮದಲ್ಲಿ ಕಚ್ಚಾ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನು ಎನ್ಐಎ ಚುರುಕುಗೊಳಿಸಿದೆ. ತನಿಖೆ ಭಾಗವಾಗಿ ಸೌಕತ್ ಮೊಲ್ಲಾ ಅವರ ಕಚೇರಿ ಸೇರಿದಂತೆ ಪತ್ನಿ ಮತ್ತು ಮಗಳ ನಿವಾಸದಲ್ಲೂ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುನ್ನೆಚ್ಚರಿಕೆ ಕ್ರಮವಾಗಿ ಸೌಕತ್ ಮೊಲ್ಲಾ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಟಿಎಂಸಿ ನಾಯಕ ವಹಿದುಲ್ ಇಸ್ಲಾಂ ಸೇರಿದಂತೆ ಹಲವರನ್ನು ಎನ್ಐಎ ಈಗಾಗಲೇ ಬಂಧಿಸಿದೆ. ಕ್ಯಾನಿಂಗ್ ಪೂರ್ವ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ 2016 ಮತ್ತು 2021ರ ಚುನಾವಣೆಗಳಲ್ಲಿ ಜಯಗಳಿಸಿದ್ದ ಮೊಲ್ಲಾ ಅವರಿಗೆ ನೀಡಿದ್ದ ಭದ್ರತೆಯನ್ನು ಪಶ್ಚಿಮ ಬಂಗಾಳ ಸರ್ಕಾರ ಇತ್ತೀಚೆಗಷ್ಟೇ ಹಿಂತೆಗೆದುಕೊಂಡಿತ್ತು.