Mandya-Sumalatha: ಕಾಂಗ್ರೆಸ್ ಕೊಟ್ಟ ಬಿಗ್ ಆಫರ್ ಧಿಕ್ಕರಿಸಿ ಬಿಜೆಪಿ ಸೇರಿದ್ದರು ಸುಮಲತಾ! ಸಿಡಿದೆದ್ರು ಮಂಡ್ಯದ ಅಭಿಮಾನಿಗಳು!
ಮಂಡ್ಯ (ಜೂ.02): ಯಾವ ಪಕ್ಷದ ಬೆಂಬಲವನ್ನೂ ಪಡೆಯದೇ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ (Mandya) ಜಿಲ್ಲೆಯಲ್ಲಿ ಕಣಕ್ಕಿಳಿದು ಭರ್ಜರಿ ಗೆಲುವು ಸಾಧಿಸಿದ ಅಂಬಿ ಪತ್ನಿ, ಬಿಜೆಪಿ ಪಕ್ಷ ಸೇರಿ ತಪ್ಪು ಮಾಡಿಬಿಟ್ರಾ? ಈ ಪ್ರಶ್ನೆ ಇಂದು ಅಭಿಮಾನಿಗಳನ್ನೇ ರೊಚ್ಚಿಗೇಳಿಸಿದೆ. ಜೆಡಿಎಸ್ ವಿರುದ್ಧ ಸವಾಲ್ ಹಾಕಿ ಗೆದ್ದ ಸುಮಲತಾ (Sumalatha) ಬಿಜೆಪಿ ಸೇರಿದ ಬಳಿಕ ಸೈಲೆಂಟ್ ಆಗಿಬಿಟ್ರು. ಮೈತ್ರಿ ಹೆಸರಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಅನ್ಯಾಯವಾಗ್ತಿದೆ ಅಂತ ಅಭಿಮಾನಿಗಳು ಕೂಗಿ ಹೇಳ್ತಿದ್ದಾರೆ. ಇದೀಗ ನಾಯಕಿಯನ್ನ ಕಡೆಗಣಿಸಿದ ಬಿಜೆಪಿ (BJP) ವಿರುದ್ಧ ಅಭಿಮಾನಿಗಳು ಕಹಳೆ ಮೊಳಗಿಸಿದ್ದಾರೆ. ಸುಮಲತಾ ವಿರುದ್ಧವೂ ಬೆಂಬಲಗರೇ ಅಸಮಾಧಾನ ಹೊರಹಾಕ್ತಿದೆ. ಮಂಡ್ಯ ರಾಜಕೀಯದಲ್ಲಿ ಏನಾಗ್ತಿದೆ.
ಬಿಜೆಪಿ ಸೇರಿ ತಪ್ಪು ಮಾಡಿದ್ರಾ ಸುಮಲತಾ? ಸುಮಲತಾ ಅಂಬರೀಶ್ ಅವರನ್ನ ಬಿಜೆಪಿ ಕಡೆಗಣಿಸುತ್ತಿದೆ ಎಂದು ಮಾಜಿ ಸಂಸದೆಯ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆಗೆ ಸೂಕ್ತ ಸ್ಥಾನಮಾನ ಕೊಟ್ಟಿಲ್ಲ ಯಾಕೆ ಅಂತ ಬಿಜೆಪಿ ವಿರುದ್ಧ ಸುಮಲತಾ ಬೆಂಬಲಿಗರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಕೊಟ್ಟಿತ್ತು ಬಿಗ್ ಆಫರ್ ಕಾಂಗ್ರೆಸ್ ಪಕ್ಷದಿಂದಲೇ ಚುನಾವಣೆಗೆ ನಿಂತು, ಗೆದ್ದು ಮಂತ್ರಿಯಾಗಿದ್ರು ಅಂಬರೀಷ್, ಅಂಬಿ ನಿಧನದ ಬಳಿಕ ಸುಮಲತಾಗೆ ಬಿಗ್ ಆಫರ್ ಕೊಟ್ಟು ಪಕ್ಷಕ್ಕೆ ಆಹ್ವಾನಿಸಿತ್ತಂತೆ ಕಾಂಗ್ರೆಸ್. ಆದ್ರೆ ಆ ಆಫರ್ ಧಿಕ್ಕರಿಸಿ ಸುಮಲತಾ ಅವರು ಬಿಜೆಪಿ ಸೇರಿದ್ರು. ಇದೀಗ ಬಿಜೆಪಿಯೇ ಅವರನ್ನ ಕಡೆಗಣಿಸುತ್ತಿದೆ ಎಂದು ಸುಮಲತಾ ಅಭಿಮಾನಿಗಳು ಆರೋಪ ಮಾಡ್ತಿದ್ದಾರೆ.