ಡಿಎಂಕೆ ಬೆನ್ನಿಗೆ ಇರಿದ ಕಾಂಗ್ರೆಸ್ಸನ್ನು ಇನ್ನೆಂದೂ ನಂಬುವುದಿಲ್ಲ: ಉದಯನಿಧಿ
ಚೆನ್ನೈ: 'ಡಿಎಂಕೆ ಬೆನ್ನಿಗೆ ಇರಿದಿರುವ ಇಂಗ್ರೆಸ್ ಪಕ್ಷವನ್ನು ಇನ್ನೆಂದೂ ನಂಬಬಾರದು' ಎಂದು ಪಕ್ಷದ ಕಾರ್ಯಕರ್ತರಿಗೆ ಡಿಎಂಕೆ ಯುವ ಘಟಕದ ಅಧ್ಯಕ್ಷ ಉದಯನಿಧಿ ಸ್ಟಾಲಿನ್ ಕರೆ ನೀಡಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಬೆಂಬಲ ಘೋಷಿಸಿತ್ತು. '10 ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ನಮ್ಮ ನೆರವನ್ನು ಪಡೆದುಕೊಂಡಿತು. ಆದರೆ ಇಂದು ನಮ್ಮ ಬೆನ್ನಿಗೆ ಚೂರಿ ಇರಿದಿದೆ. ಯಾರೂ ಇದನ್ನು ಎಂದಿಗೂ ಮರೆಯಬಾರದು. ಭವಿಷ್ಯದಲ್ಲಿ ಯಾವ ಹಂತದಲ್ಲೂ ಕಾಂಗ್ರೆಸ್ ಅನ್ನು ನಂಬಲೇಬಾರದು' ಎಂದು ಹೇಳಿದ್ದಾರೆ. ಡಿಎಂಕೆ ಯುವ ಘಟಕದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉದಯನಿಧಿ, 'ದೇಶದೆಲ್ಲೆಡೆ ಬಿಜೆಪಿ ಅಭೂತಪೂರ್ವ ಗೆಲುವಿಗೆ ಕಾಂಗ್ರೆಸ್ ಕಾರಣ' ಎಂದು ಟೀಕಿಸಿದ್ದಾರೆ.
ಕಳೆದ ಸಾರ್ವತ್ರಿಕ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಬೆಂಬಲ ತೋರಿದ್ದಕ್ಕಾಗಿ ಉದಯನಿಧಿ ವಿಷಾದಿಸಿದರು. 'ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಡಿಎಂಕೆ ಕಾರ್ಯಕರ್ತರು ‘ರಕ್ತ ಮತ್ತು ಬೆವರು’ ಸುರಿಸಿದರು. ಅಲ್ಲದೆ ಡಿಎಂಕೆ ಕಾರ್ಯಕರ್ತರ ದಣಿವರಿಯದ ಕೆಲಸದಿಂದಾಗಿ ಅಸ್ತಿತ್ವದಲ್ಲೇ ಇಲ್ಲದ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಆದರೆ ಗೆದ್ದ ತಕ್ಷಣ ಅಧಿಕಾರದ ಆಸೆಯಿಂದ ಒಂದು ಮಾತನ್ನು ಹೇಳದೇ ಓಡಿ ಹೋಯಿತು' ಎಂದು ಆರೋಪಿಸಿದ್ದಾರೆ. ಅವರಿಗೆ ಡಿಎಂಕೆ ಪಾಠ ಕಲಿಸದಿದ್ದರೂ ರಾಜ್ಯತೆ ಜನತೆ ಶೀಘ್ರದಲ್ಲೇ ಪಾಠ ಕಲಿಸಲಿದೆ ಎಂದು ಅವರು ಹೇಳಿದ್ದಾರೆ.