ಜನರ ವಿಭಜಿಸುವ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು: ಉದಯನಿಧಿ ಸ್ಪಷ್ಟನೆ
ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸನಾತನ ಧರ್ಮ ನಾಶಗೊಳಿಸಬೇಕು ಎಂಬ ವಿವಾದತ್ಮಾಕ ಹೇಳಿಕೆ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸ್ಪಷ್ಟನೆ ನೀಡಿದ್ದಾರೆ. 'ಜನರನ್ನು ಮೇಲ್ಜಾತಿ, ಕೆಳಜಾತಿಗಳೆಂದು ವಿಭಜಿಸುವ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂಬ ಉದ್ದೇಶವನ್ನಷ್ಟೇ ಹೊಂದಿದ್ದೆ' ಎಂದು ಪ್ರತಿಕ್ರಿಯಿಸಿದ್ದಾರೆ. 'ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವುದು ಅಂದರೆ ಯಾರೂ ದೇವಸ್ಥಾನಕ್ಕೆ ಹೋಗಬಾರದು ಎಂದಲ್ಲ. ದೇವಾಲಯದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿಯೂ ಎಲ್ಲರಿಗೂ ಸಮಾನ ಹಕ್ಕುಗಳಿರಬೇಕು' ಎಂದು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ತಮಿಳುನಾಡು ವಿಧಾನಸಭೆಯಲ್ಲಿ ಭಾಷಣ ವೇಳೆ ಜನರನ್ನು ವಿಭಜಿಸುವ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದೆ. ಕೆಲವರು ನನ್ನನ್ನು ಟೀಕಿಸಿದ್ದಾರೆ. ಆದರೆ ನಾನು ಭಯಪಡುವ ವ್ಯಕ್ತಿಯಲ್ಲ. ಹೋರಾಟದಿಂದಲೇ ದ್ರಾವಿಡ ಚಳವಳಿ ಹೊರಹೊಮ್ಮಿದೆ. ಹಾಗಾಗಿ ಈ ಕುರಿತು ವಿವರಣೆ ನೀಡಲು ಬಯಸುತ್ತೇನೆ' ಎಂದಿದ್ದಾರೆ. 'ಪೆರಿಯಾರ್, ಅಂಬೇಡ್ಕರ್, ಅಣ್ಣಾ ಹೇಳಿದ ತತ್ವಗಳ ಬಗ್ಗೆಯೂ ನಾನು ಮಾತನಾಡಿದ್ದೇನೆ. ದೇವರಲ್ಲಿ ನಂಬಿಕೆಗೆ ನಾವು ವಿರೋಧಿಗಳಲ್ಲ. ಆದರೆ ಅಸಮಾನತೆ ಹಾಗೂ ದಬ್ಬಾಳಿಕೆಯನ್ನು ಬಲವಾಗಿ ವಿರೋಧಿಸುತ್ತೇವೆ' ಎಂದು ಹೇಳಿದ್ದಾರೆ.