ನಟ ವಿಜಯ್ ವೇಲಂಕಣಿ ಪ್ರವಾಸ ರದ್ದು; ಅಭಿಮಾನಿಗಳಿಗೆ ನಿರಾಸೆ
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಸರಣಿ ಧಾರ್ಮಿಕ ಯಾತ್ರೆ ಕೈಗೊಂಡಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್, ಶನಿವಾರ ನಾಗಪಟ್ಟಣ ಜಿಲ್ಲೆಯ ಪ್ರಸಿದ್ಧ ವೇಲಂಕಣಿ ಚರ್ಚ್ಗೆ ನೀಡಬೇಕಿದ್ದ ಭೇಟಿಯನ್ನು ಹಠಾತ್ತಾಗಿ ರದ್ದುಗೊಳಿಸಿದ್ದಾರೆ. ಇದರಿಂದ ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಏಪ್ರಿಲ್ 23ರಂದು ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ನಂತರ, ರಾಜಕೀಯ ರಂಗಕ್ಕೆ ಧುಮುಕಿರುವ ವಿಜಯ್ ಅವರು ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ.
ಈಗಾಗಲೇ ಅವರು ತಿರುಚೆಂದೂರಿನ ಪುರಾಣ ಪ್ರಸಿದ್ಧ ಲಾರ್ಡ್ ಮುರುಗನ್ ದೇವಸ್ಥಾನ ಹಾಗೂ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅದೇ ರೀತಿ, ಶನಿವಾರ ಮುಂಜಾನೆ ಕ್ರೈಸ್ತರ ಪವಿತ್ರ ಯಾತ್ರಾ ಸ್ಥಳ ಹಾಗೂ 'ಬಸಿಲಿಕಾ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್' ಎಂದೇ ಖ್ಯಾತಿಯಾಗಿರುವ ವೇಲಂಕಣಿ ಚರ್ಚ್ಗೆ ಭೇಟಿ ನೀಡಲು ವಿಜಯ್ ಯೋಜಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ನಾಗಪಟ್ಟಣ ಮತ್ತು ವೇಲಂಕಣಿ ಸುತ್ತಮುತ್ತಲ ಪ್ರದೇಶಗಳಿಂದ ಸಾವಿರಾರು ಅಭಿಮಾನಿಗಳು ಚರ್ಚ್ ಆವರಣದಲ್ಲಿ ಜಮಾಯಿಸಿದ್ದರು.
ನೆಚ್ಚಿನ ನಟನ ಒಂದು ನೋಟಕ್ಕಾಗಿ ಅಭಿಮಾನಿಗಳು ಗಂಟೆಗಟ್ಟಲೆ ಕಾಯುತ್ತಿದ್ದರು. ಆದರೆ, ಅನಿವಾರ್ಯ ವೈಯಕ್ತಿಕ ಕಾರಣಗಳಿಂದಾಗಿ ವಿಜಯ್ ಅವರು ಶನಿವಾರದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಟಿವಿಕೆ ಪಕ್ಷದ ಮೂಲಗಳು ತಿಳಿಸಿವೆ. ಇಂದು ಬರಲಾಗದಿದ್ದರೂ, ನಾಳೆ ಅಂದರೆ ಭಾನುವಾರ ವಿಜಯ್ ಅವರು ವೇಲಂಕಣಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಸುಳಿವು ನೀಡಿವೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ನಾಳೆಯೂ ನಟನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.