ಟಿಬಿ ಡ್ಯಾಂ ಹಿನ್ನೀರಿನ ಕೈಗಾರಿಕೆ ಲೈಸೆನ್ಸ್ ರದ್ದತಿಗಾಗಿ ಹೋರಾಟ
ಬೆಂಗಳೂರು : ಜನರ ಆರೋಗ್ಯದ ದೃಷ್ಟಿಯಿಂದ ಕೊಪ್ಪಳ ಬಲ್ಡೋಟ ಕಾರ್ಖಾನೆಯ ವಿಸ್ತರಣೆ ರದ್ದು ಹಾಗೂ ತುಂಗಭದ್ರಾ ಜಲಾಶಯದ ಹಿನ್ನೀರಿನ ತಟದಲ್ಲಿರುವ 28 ಮಾಲಿನ್ಯಕಾರಕ ಕೈಗಾರಿಕೆಗಳ ಲೈಸನ್ಸ್ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸೋಮವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ಆಯೋಜಿಸಿರುವ ಪ್ರತಿಭಟನೆಯಲ್ಲಿ ಕೈಗಾರಿಕೆಗಳ ಮಾಲಿನ್ಯದಿಂದ ಬಾಧಿತರಾಗಿರುವ ಗ್ರಾಮಗಳ ಸಾವಿರಾರು ಜನ ಭಾಗವಹಿಸಲಿದ್ದಾರೆ.
ವಿಷಾನಿಲ ಸೂಸುವ ಕಾರ್ಖಾನೆ ಸ್ಥಳಾಂತರಿಸಿ:
ಬಲ್ಡೋಟ ಕಾರ್ಖಾನೆಯ ₹54 ಸಾವಿರ ಕೋಟಿ ವೆಚ್ಚದ ವಿಸ್ತರಣೆ ಒಡಂಬಡಿಕೆಯನ್ನು ಕೊಪ್ಪಳ-ಭಾಗ್ಯನಗರದ 1.5 ಲಕ್ಷ ಜನರ ಆರೋಗ್ಯ ಮತ್ತು ಜೀವಕ್ಕೆ ಹಾನಿ ಮಾಡುವುದರಿಂದ ರದ್ದು ಮಾಡಬೇಕು. ಗಿಣಿಗೇರಿ, ಕನಕಾಪುರ, ಹಿರೇಬಗನಾಳ, ಅಲ್ಲಾನಗರ, ಕಾಸನಕಂಡಿ, ಚಿಕ್ಕಬಗನಾಳ, ಕುಣಿಕೇರಿ, ಲಾಚನಕೇರಿ, ಕುಣಿಕೇರಿ ತಾಂಡಾ, ಹಾಲವರ್ತಿ, ಬಸಾಪುರ, ಹುಲಿಗಿ ಮುಂತಾದ 20 ಹಳ್ಳಿಗಳ ಜನರ ಜೀವಕ್ಕೆ ಕಂಟಕವಾದ ವಿಷಾನಿಲ ಹೊರಸೂಸುವ ಕಾರ್ಖಾನೆಗಳನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ತಂಡದ ವರದಿಯ ಶಿಫಾರಸಿನಂತೆ ಸ್ಥಳಾಂತರ ಮಾಡಬೇಕು.
ಜಲ, ವಾಯು ಮಾಲಿನ್ಯದಿಂದ ಜಾನುವಾರುಗಳು ಕೂಡ ಅನಾರೋಗ್ಯಪೀಡಿತವಾಗಿ ಸಾಯುತ್ತಿದೆ. ಎಲ್ಲಾ ತೋಟಗಾರಿಕೆಯ ಹಣ್ಣು ಹಂಪಲು, ತರಕಾರಿ, ಎಲೆಬಳ್ಳಿ ಬೇಸಾಯ ಸೊರಗಿ ಹೋಗಿದೆ. ಇದರ ಅಪಾಯ ಅರಿತ ಗವಿಶ್ರೀಗಳು, 20 ಹಳ್ಳಿಗಳ ಜನರ ಜೀವ, ಕೃಷಿ ಬದುಕು ಉಳಿಯಬೇಕಾದರೆ ಇಲ್ಲಿರುವ ಎಲ್ಲಾ ಕಾರ್ಖಾನೆಗಳ ಮಾಲಿನ್ಯ ಕಡ್ಡಾಯವಾಗಿ ನಿಯಂತ್ರಣ ಮಾಡಬೇಕು ಎಂದಿದ್ದರು. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವೇದಿಕೆ ಹೇಳಿದೆ.
ಆರೋಗ್ಯ ಸಮೀಕ್ಷೆ ಮಾಡಿ:
ತುಂಗಭದ್ರಾ ನದಿ ನೀರನ್ನು ಮಾಲಿನ್ಯ ಮಾಡಿರುವ ಕಾರ್ಖಾನೆಗಳನ್ನು ಮುಚ್ಚಬೇಕು. ಬಾಧಿತ 20 ಹಳ್ಳಿಗಳ ಜನರ ಆರೋಗ್ಯ ಸಮೀಕ್ಷೆ ಮಾಡಿಸಬೇಕು. ಕಾರ್ಖಾನೆಗಳ ಚಿಮಣಿಗಳು ಉಗುಳುವ ಹೊಗೆ, ಕಪ್ಪು ಬೂದಿ, ದೂಳಿನಿಂದ 20 ಹಳ್ಳಿಗಳ 50 ಸಾವಿರ ಜನ ಸಂಪೂರ್ಣ ಕೃಷಿ ಕಳೆದುಕೊಂಡಿದ್ದಾರೆ.
ದ್ರವ ತ್ಯಾಜ್ಯವನ್ನು ಖಾಲಿ ಬೋರ್ವೆಲ್ ಕೊರೆದು ಭೂಗರ್ಭಕ್ಕೆ ಸೇರಿಸುತ್ತಿದ್ದು, ಅಂತರ್ಜಲ ಸಂಪೂರ್ಣ ವಿಷವಾಗಿದೆ ಎಂದು ಹಿತರಕ್ಷಣಾ ವೇದಿಕೆಯ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಹೇಳಿದ್ದಾರೆ.
ಹೃದಯರಂಧ್ರ, ಮೂರ್ಛೆ ರೋಗ, ನರರೋಗ ಬಾಧಿಸುತ್ತಿವೆ. ಕುರುಡುತನ, ಬಂಜೆತನ, ನಪುಂಸಕತ್ವ, ಟಿ.ಬಿ, ಅಸ್ತಮಾ, ಉಸಿರಾಟದ ಅಲರ್ಜಿ, ಚರ್ಮರೋಗಗಳು ಕಾಡುತ್ತಿವೆ. ಕ್ಯಾನ್ಸರ್ನಂಥ ಭಯಾನಕ ರೋಗಗಳಿಂದ ಜನ ಸಾಯುತ್ತಿದ್ದಾರೆ. ಹೀಗಿದ್ದರೂ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬಲ್ಡೋಟ ಕಾರ್ಖಾನೆಯನ್ನು ₹54 ಸಾವಿರ ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲು ಒಡಂಬಡಿಕೆ ಮಾಡಿಕೊಂಡಿದೆ ಎಂದು ಘೋಷಿಸಿರುವುದು ದುರದೃಷ್ಟಕರ ಎಂದು ಮತ್ತೋರ್ವ ಸಂಚಾಲಕ ಮಂಜುನಾಥ ಗೊಂಡಬಾಳ ತಿಳಿಸಿದ್ದಾರೆ.