ಎಸ್ಬಿಐಗೆ ವಂಚನೆ ಪ್ರಕರಣ: ಅನಿಲ್ ಅಂಬಾನಿ ವಿಚಾರಣೆ ನಡೆಸಿದ ಸಿಬಿಐ
ನವದೆಹಲಿ: ರಿಲಯನ್ಸ್ ಕಮ್ಯೂನಿಕೇಷನ್ ಲಿಮಿಟೆಡ್ (ಆರ್ಕಾಮ್) ವಿರುದ್ಧ ದಾಖಲಾಗಿರುವ ₹2,929 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಅನಿಲ್ ಅಂಬಾನಿ ಅವರನ್ನು ಸಿಬಿಐ ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ(ಎಸ್ಬಿಐ) ₹2,929 ಕೋಟಿ ವಂಚನೆ ಮಾಡಿದ ಆರೋಪ ರಿಲಯನ್ಸ್ ಕಮ್ಯೂನಿಕೇಷನ್ ಲಿಮಿಟೆಡ್ ಕಂಪನಿ ಮೇಲಿದೆ. ಎಸ್ಬಿಐ ದೂರಿನನ್ವಯ ವಿಚಾರಣೆ ನಡೆಸಲಾಗುತ್ತಿದೆ.
ಮಾರ್ಚ್ 19 ಹಾಗೂ 20ರಂದು ದೆಹಲಿಯ ಸಿಬಿಐ ಕಚೇರಿಯಲ್ಲಿ ಅನಿಲ್ ಅಂಬಾನಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಎಸ್ಬಿಐಗೆ ₹2,929 ಕೋಟಿ ವಂಚನೆ ಮಾಡಿದ ಆರೋಪಕ್ಕೆ ಸಂಬಧಿಸಿದಂತೆ ಪ್ರಕರಣ ದಾಖಲಿಸಲಾಗಿತ್ತು. ವಂಚನೆ, ಕ್ರಿಮಿನಲ್ ಪಿತೂರಿ, ನಂಬಿಕೆ ಉಲ್ಲಂಘನೆಯ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಆರ್ಕಾಮ್ ₹40,000 ಕೋಟಿ ಸಾಲ ಬಾಕಿ ಇರಿಸಿಕೊಂಡಿದೆ. ಎಸ್ಬಿಐ ಒಂದಕ್ಕೇ ₹ 2,929 ಕೋಟಿ ನಷ್ಟ ಉಂಟು ಮಾಡಿದೆ ಎಂಬ ಆರೋಪ ಎಸ್ಬಿಐ ಸಲ್ಲಿಸಿರುವ ದೂರು ಆಧರಿಸಿ ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿದೆ.